ಶೇಖರಣೆ ಮಾಡಿದ ಖಾದ್ಯ ವಸ್ತುಗಳಿಗೆ ಅತ್ಯಂತ ಹಾನಿಯನ್ನುಂಟು ಮಾಡುವ ಪತಂಗದ (ಚಿಟ್ಟೆಯ) ಗುಂಪಿಗೆ ಸೇರಿದ ಜೀವಿಯೆಂದರೆ ಅಕ್ಕಿ ಚಿಟ್ಟೆ. ಕಾರ್ಸೈರಾ ಕಿಫಲೋನಿಕ ಎಂಬ ಹೆಸರುಳ್ಳ ಈ ಕೀಟ ಲೆಪಿಡಾಪ್ಟಿರ ಗಣದ ಪೈರಾಲಿಡೀ ಕುಟುಂಬಕ್ಕೆ ಸೇರಿದ್ದು. ಈ ಹುಳುವಿನ ಕಾಟಕ್ಕೆ ತುತ್ತಾಗುವ ಆಹಾರ ಪದಾರ್ಥಗಳ ಶ್ರೇಣಿ ಅತ್ಯಂತ ವಿಸ್ತಾರ. ಉದಾಹರಣೆಗೆ: ಆಹಾರ ಧಾನ್ಯಗಳು ಅದರಲ್ಲೂ ಒಡೆದು ಬೀಸಿದವು (ನುಚ್ಚು, ತರಿ, ರವೆ, ಹಿಟ್ಟು, ಆಟ್ಟ, ಬೂಸ, ಬೇಸಿನ್, ಮೈದಾ, ಇತ್ಯಾದಿ), ಸಾಂಬಾರ ವಸ್ತುಗಳು, ಸೇಂಗಾ ಬೀಜ, ಒಣ ಹಣ್ಣುಗಳು, ಬಿಸ್ಕತ್, ಹಿಂಡಿ, ಕೋಕೋ, ಇತ್ಯಾದಿಗಳು. ತಿಂದು ಮುಗಿಸುವುದಕ್ಕಿಂತ ಹೆಚ್ಚಾಗಿ ನೂಲು ಎಳೆಗಳಿಂದ ಆಹಾರ ಪದಾರ್ಥಗಳ ಆದ್ಯಂತ ದಟ್ಟವಾದ ಬಲೆ ಕಟ್ಟುವುದರಿಂದ, ಹುಳುಬಿದ್ದ ಖಾದ್ಯ ವಸ್ತುಗಳನ್ನು ಶುಚಿಮಾಡಿ ಉಪಯೋಗಿಸಲು ಸಾಧ್ಯವಿಲ್ಲವಾಗುವುದು. ಪ್ರಾಯದ ಚಿಟ್ಟೆ ಕಂದು ಬಣ್ಣದ್ದು; ರೆಕ್ಕೆ ಪುರ್ತಿ ಪಸರಿಸಿದಾಗ ತುದಿಯಿಂದ ತುದಿಗೆ 1.25 - 2 ಸೆಂಮೀ ಇರುತ್ತದೆ. ಗಂಡು ಚಿಟ್ಟೆ ಹೆಣ್ಣಿಗಿಂತ ಚಿಕ್ಕದು. ಹಗಲಿನಲ್ಲಿ ಉಗ್ರಾಣದ ಕತ್ತಲು ಪ್ರದೇಶಗಳಲ್ಲಿ ಅಂದರೆ ಗೋಡೆ, ಚಾವಣಿ, ಮೂಟೆ ಮುಂತಾದ ಜಾಗಗಳಲ್ಲಿ ಕುಳಿತಿದ್ದು, ರಾತ್ರಿಕಾಲದಲ್ಲಿ ಚಟುವಟಿಕೆಯಿಂದ ಹಾರಾಡುತ್ತದೆ. ತಾಯಿ ಚಿಟ್ಟೆ ಸು. 200 ದುಂಡುತತ್ತಿಗಳನ್ನು ಒಂಟಿ ಒಂಟಿಯಾಗಿ ಆಹಾರ ವಸ್ತುಗಳ ಬಳಿ ಇಡುತ್ತದೆ. ಮರಿಹುಳು ರೇಷ್ಮೆನೂಲಿನ ಬಲೆಯಿಂದ ಆಹಾರವನ್ನು ಆವರಿಸಿ, ಒಳಗೆ ಮೇಯುತ್ತಾ ಪ್ರವರ್ಧಮಾನಕ್ಕೆ ಬರುತ್ತದೆ. ಈ ರೀತಿ ಬಲೆಯಿಂದ ಆವರಿಸುವುದಕ್ಕೆ ತೆಂಡೆ ಕಟ್ಟುವುದು ಎಂದು ಕರೆಯುತ್ತಾರೆ. ಮರಿ ಹುಳ ನಸು ಹಳದಿಬಣ್ಣದ್ದು; ಇದು ರೂಪಪರಿವರ್ತನೆಯಾಗಿ ಹೊರಬರಲು ಸು. 6 ವಾರ ಬೇಕು; ವರ್ಷಕ್ಕೆ 6-8 ಬಾರಿ ಸಂತಾನೋತ್ಪತ್ತಿ ಮಾಡುತ್ತವೆ.